ಆಹಾರ ಸಂಸ್ಕೃತಿಯು ಒಂದು ವರ್ಗ ಅಥವಾ ಸಮುದಾಯದ ಜನರ ಬದುಕು ಮತ್ತು ಬದುಕುವ ರೀತಿಯನ್ನು ಬಿಂಬಿಸುತ್ತದೆ. ಆಹಾರ ಸಂಸ್ಕೃತಿಯು ಸಾಮೂಹಿಕ ಹವ್ಯಾಸಗಳು, ಆಚರಣೆಗಳು, ನಂಬಿಕೆಗಳು ಮೌಲ್ಯಗಳು, ಜೀವನಶೈಲಿ ಮತ್ತು ಆಹಾರವನ್ನು ತಯಾರಿಸುವುದು , ಸಂಗ್ರಹಿಸುವುದು ಮತ್ತು ಸೇವಿಸುವ ಹವ್ಯಾಸಗಳಿಂದ ಗುರುತಿಕೊಳ್ಳುತ್ತದೆ.
ಆಹಾರ ನಮ್ಮ ಅಸ್ಥಿತ್ವ ಮತ್ತು ಸಂಸ್ಕೃತಿ ಮೇಲೆ ಪರಿಣಾಮ ಬೀರುತ್ತದೆ. ಆಹಾರವು ನಮ್ಮನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಕುಟುಂಬಗಳು, ಸಮಾಜಗಳು ಮತ್ತು ದೊಡ್ಡ ದೇಶಗಳೊಂದಿಗೆ ಸಂಬಂಧವನ್ನು ಬೆಸೆಯಲು ಸಹಾಯ ಮಾಡುತ್ತದೆ.
ಬೇರೆ ದೇಶಗಳಂತೆ ಭಾರತದಲ್ಲಿಯೂ ಆಹಾರ ಸಂಸ್ಕೃತಿಯು ಹವಾಮಾನ, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಾರದಿಂದ ರೂಪುಗೊಂಡಿದೆ. ಋತುಮಾನಕ್ಕೆ ತಕ್ಕಂತೆ ಆಹಾರ ವ್ಯವಸ್ಥೆಯು ಪ್ರಾಮುಖ್ಯತೆಯನ್ನು ಪಡೆಯತ್ತದೆ. ಬೇಸಿಗೆಯಲ್ಲಿ ಮಾವು ಸ್ಥಳೀಯ ಸೊಪ್ಪುಗಳು, ಮಳೆಗಾಲದ ಮಾನ್ಸೂನ್ ತಿಂಗಳುಗಳಲ್ಲಿ ಕುಂಬಳಕಾಯಿ ಮತ್ತು ಚಳಿಗಾಲದ ತಿಂಗಳಲ್ಲಿ ಬೇರು ತರಕಾರಿಗಳಂತಹ ಕೃಷಿ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಹೆಚ್ಚು ಒತ್ತು ನೀಡುತ್ತದೆ.
ಸಾಂಪ್ರಾದಾಯಿಕ ಹಿನ್ನಲೆ ಹಾಗೂ ತಲೆಮಾರಿನಿಂದ ನಡೆದು ಬಂದಿರುವ ಆಹಾರ ಪದ್ಧತಿಗಳಲ್ಲಿ ದಕ್ಷಿಣ ಕನ್ನಡದ ತುಳುವರ ಸಾಂಪ್ರಾದಾಯಿಕ ಖಾದ್ಯ ಪತ್ರೋಡೆ. ಮಳೆಗಾಲದ ವಿಶಿಷ್ಟ ಆಹಾರಗಳಲ್ಲಿ ಒಂದಾದ ಪತ್ರೋಡೆ ಮೂಲತಃ ಭಾರತದ ಸಸ್ಯಾಹಾರಿ ಆಹಾರವಾಗಿದೆ.
ಇದು ಹಿಮಾಚಲ ಪ್ರದೇಶ, ಯುಪಿ ಮತ್ತು ಬಿಹಾರಗಳಲ್ಲಿ ‘ರಿಕ್ವಾಚ್’ಎಂಬ ಹೆಸರಿನಲ್ಲಿ ಪರಿಚಿತ. ಭಾರತದ ಇತರ ಕೆಲವು ಭಾಗಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಗುರುತಿಸಲಾಗುತ್ತದೆ.ಗುಜರಾತಿನ ಪತ್ರಾ, ಗೋವಾದಲ್ಲಿ ಪತ್ರೋಡೋ, ಹಿಮಾಚಲ ಪ್ರದೇಶದ ಪತ್ರೋಡು ಎಂದು ಕರೆಯಲಾಗುತ್ತದೆ.
ಸಂಸ್ಕೃತ ಭಾಷೆಯಲ್ಲಿ ಪತ್ರ ಎಂದರೆ ಎಲೆ. ಎಲೆ ಮತ್ತು ವಡೆ ಎರಡರ ಸಮಾಗಮದಲ್ಲಿ ತಯಾರಾಗುವ ವಿಶಿಷ್ಟ ಆಹಾರ ಪತ್ರೋಡೆ. ಕರಾವಳಿ ಕರ್ನಾಟಕದ ಪತ್ರೋಡೆಯನ್ನು ಅಕ್ಕಿ ಹಿಟ್ಟು ಮತ್ತು ಮಸಾಲೆಗಳು, ಹುಣಸೆಹಣ್ಣು ಮತ್ತು ಕೆಸುವಿನ ಎಲೆಯಲ್ಲಿ ತಯಾರಿಸಲಾಗುತ್ತದೆ.
ಜುಲೈ 2021 ರಲ್ಲಿ ಪತ್ರೋಡೆಯನ್ನು ಕೇಂದ್ರ ಆಯಷ್ ಸಚಿವಾಲಯವು ಆಯುಷ್ ವೈದ್ಯಕೀಯ ಪದ್ಧತಿ ಸಾಂಪ್ರದಾಯಿಕ ಆಹಾರ ಪಾಕವಿಧಾನಗಳಲ್ಲಿ ಒಂದಾಗಿದೆ ಎಂದು ಗರುತಿಸಿದೆ. ಆಯುಷ್ ಸಚಿವಾಲಯದ ಪ್ರಕಾರ, ಕಬ್ಬಿಣ-ಸಮೃದ್ಧವಾದ ಕೆಸುವಿನ ಎಲೆಗಳು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಎಲೆಗಳು ಫಿನಾಲ್ಗಳು, ಟ್ಯಾನಿನ್ಗಳು, ಫ್ಲೇವನಾಯ್ಡ್ ಗಳು, ಗ್ಲೇಕೋಸೈಡ್ಗಳು ಮತ್ತು ಸ್ಟೆರಾಲ್ ಗಳನ್ನು ಹೊಂದಿರುತ್ತದೆ.
ಇದು ಸಂಧಿವಾತದಂತಹ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲೆಗಳು ಅಪಾರ ಪ್ರಮಾಣದ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಅನ್ನು ಹೊಂದಿದೆ.
ಇದರಲ್ಲಿ ಅಡಕವಾಗಿರುವ ಹೆಚ್ಚಿನ ಫೈಬರ್ ಕಂಟೆಂಟ್, ಕೋಲೋಸ್ಟ್ರಾಲ್ ಮತ್ತು ದೇಹಲ್ಲಿ ಶುಗರ್ ಲೆವೆಲ್ ನ್ನು ಸರಿಪ್ರಮಾಣಾದಲ್ಲಿ ಸರಿದೂಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ಮಳೆಗಾಲದ ಕೆಲವೊಂದು ಆರೋಗ್ಯ ಸಮಸ್ಯೆಗೆ ರಾಮಾಬಾಣವಾಗಿದೆ.
ಇಂತಹ ವಿಶಿಷ್ಟ ಗುಣವುಳ್ಳ ಪತ್ರೋಡೆಯನ್ನ ಕೈಸ್ತ ಸಮುದಾಯದವರು ಮಾತೆ ಮೇರಿಯ ಜನ್ಮದಿನದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುತ್ತಾರೆ. ಪೂರ್ವಜರು ಕಂಡು ಕೊಂಡಿರುವ ಆಹಾರ ಪದ್ಧತಿಯನ್ನು ನಮ್ಮ ಹಿರಿಯರು ಕಟ್ಟುನಿಟ್ಟಾಗಿ ಪಾಲಿಸಕೊಂಡು ಉತ್ತಮ ಆರೋಗ್ಯವನ್ನು ಹೊಂದಿದರು.
ಆದರೆ ಇಂದಿನ ಪೀಳಿಗೆ ಇದು ಯಾವುದರ ಅರಿವಿಲ್ಲದೆ ಹೊಟ್ಟೆ ಬಿರಿಯುವಂತೆ ಫಾಸ್ಟ್ ಫುಡ್ಗಳನ್ನು ನೆಚ್ಚಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲಿಯೇ ಕಾಯಿಲೆಗೆ ತುತ್ತಾಗುತ್ತಾರೆ. ಸಂಸ್ಕೃತಿ ಸಂಪ್ರದಾಯದ ಒಂದು ಕೊಂಡಿಯಾಗಿರುವ ಈ ಆಹಾರ ಸಂಸ್ಕೃತಿ. ಇದನ್ನು ಧಿಕ್ಕರಿಸಿ ನಡೆಯುವ ಬದಲಾಗಿ ಹಿರಿಯರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆಯುವುದು ಉತ್ತಮ.
--- Send in a voice message: https://podcasters.spotify.com/pod/show/newskarnataka/message