’ಜುಗಾರಿ ಕ್ರಾಸ್’ ಎಂಬುದು ಒಂದು ಕಾಲ್ಪನಿಕ ಪ್ರದೇಶ. ಥೇಟ್ ಆರ್. ಕೆ. ನಾರಾಯಣ ಅವರ ’ಮಾಲ್ಗುಡಿ’ಯ ಹಾಗೆ. ಕಥೆ ಕಾಲ್ಪನಿಕ ಪ್ರದೇಶದಲ್ಲಿ ನಡೆದರೂ ಓದುತ್ತಿರುವಾಗ ಹಾಗೆ ಭಾಸವಾಗುವುದಿಲ್ಲ. ಓದುಗ ತನ್ನ ಓದಿಗೆ ಕೇವಲ ಸಾಕ್ಷಿ ಮಾತ್ರ ಆಗುವುದಿಲ್ಲ. ಬದಲಿಗೆ ಅದರ ಭಾಗವೇ ಆಗಿ ಬಿಡುತ್ತಾನೆ. ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಇರುವ ಜುಗಾರಿ ಕ್ರಾಸ್ ನಲ್ಲಿ ನಡೆಯುವ ಅಪರಾಧ ಪ್ರಕರಣಗಳು, ಯಾಲಕ್ಕಿ ವ್ಯಾಪಾರದ ಸುತ್ತಲಿನ ಚಿತ್ರಣ, ಅಪರೂಪದ ಆದರೆ ಬೆಲೆ ಬಾಳುವ ಕೆಂಪು ಮಣಿಗಳ ಸುತ್ತ ಅದು ನಿಜವೇನೋ ಎಂದು ಭಾಸವಾಗುವ ಚಿತ್ರಣ.
ಕನ್ನಡದ ಪ್ರಮುಖ ಗದ್ಯ ಲೇಖಕರಲ್ಲಿ ಒಬ್ಬರಾಗಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಮುಖ ಕಾದಂಬರಿ. ಪತ್ತೇದಾರಿ ಕಾದಂಬರಿಯ ಕುತೂಹಲ ಕೆರಳಿಸುವ ಅಂಶವನ್ನು ಒಳಗೊಂಡಿರುವ ’ಜುಗಾರಿ ಕ್ರಾಸ್’ ಅದೇ ಕಾರಣಕ್ಕಾಗಿಯೇ ಓದುಗನ ಗಮನ ಸೆಳೆಯುತ್ತದೆ.
ಕಥೆ ಹೇಳುವುದಕ್ಕಾಗಿ ಕಾದಂಬರಿ ಪ್ರಕಾರವನ್ನು ತೇಜಸ್ವಿಯವರು ಬಳಸಿಕೊಂಡರೂ ಅವರ ಆಸಕ್ತಿ ಇರುವುದು ಒಟ್ಟಾರೆಯಾಗಿ ಸಮಾಜದ ಚಿತ್ರಣ ನೀಡುವುದರಲ್ಲಿ. ಮಲೆನಾಡಿನ ಕೃಷಿಕ ದಂಪತಿಗಳಾದ ಸುರೇಶ್ ಮತ್ತು ಗೌರಿ ಅವರ ಸ್ವಾರಸ್ಯಕರ ಬದುಕು ಮತ್ತು ಅದರ ಏರಿಳಿತಗಳನ್ನು ಹೃದಯಂಗಮವಾಗಿ ನಿರೂಪಿಸುತ್ತದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಹೊಂದಿರುವ ’ಜುಗಾರಿ ಕ್ರಾಸ್’ ಅದೇ ಕಾರಣಕ್ಕಾಗಿಯೇ ಓದುಗನಿಗೆ ಪ್ರಿಯವಾಗುತ್ತದೆ ಕೂಡ. ಸುಲಲಿತ ಶೈಲಿ, ಸುಭಗ ಭಾಷೆಯನ್ನು ಬೆಳೆಸುವ ರೀತಿ ಓದುಗನ ಮೆಚ್ಚುಗೆಗೆ ಪಾತ್ರವಾಗುತ್ತವೆ. ಘಟನೆಯಿಂದ ಘಟನೆಗೆ ಕುತೂಹಲಕಾರಿಯಾಗಿ ಬೆಳೆಯುತ್ತ ಹೋಗುವ ಕಥೆ. ಓದುಗ ತುದಿಗಾಲ ಮೆಲೆ ನಿಂತು ಓದುವಂತೆ ಮಾಡುತ್ತದೆ. ಮಾತ್ರವಲ್ಲ ಮುಗಿಯುವ ವರೆಗೆ ಕೆಳಗಿಡದಂತೆ ಮಾಡುತ್ತದೆ. ಕಾಲ್ಪನಿಕ ಕಥೆಯೊಂದು ಬದುಕಿನ ಭಾಗವೇ ಏನೋ ಎನ್ನುವಂತೆ ರಚಿಸಿರುವ ಲೇಖಕರ ಮೋಹಕ ಶೈಲಿಯು ಈ ಕಾದಂಬರಿಯು ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿಸುವುದಕ್ಕೆ ಕಾರಣವಾಗಿದೆ.
ತೇಜಸ್ವಿಯವರ ಓದಲೇ ಬೇಕಾದ ಕಾದಂಬರಿಯಿದು. ಓದಿನ ಸುಖ ಒದಗಿಸುವ ಈ ಕಾದಂಬರಿಯನ್ನು ಓದುವುದೇ ಒಂದು ಸೊಗಸಲು. ಈ ಕಾದಂಬರಿಯ ಓದು ಮನಸ್ಸಿನ ಮುದ ನೀಡುವುದರ ಜೊತೆಗೆ ವರ್ತಮಾನದ ಬದುಕಿನ ಕುರಿತಾದ ಚಿಂತನೆಗೆ ತೊಡಗಿಸುವ ಅಂಶಗಳನ್ನೂ ಒಳಗೊಂಡಿದೆ.
--- Send in a voice message: https://podcasters.spotify.com/pod/show/newskarnataka/message